ಯಲ್ಲಾ ಪ್ರಗಡ ಸುಬ್ಬರಾವ್ (೧೨ ಜನವರಿ ೧೮೯೫ – ೮ ಆಗಸ್ಟ್ ೧೯೪೮) ಅವರು ಅಡೆನೋಸೀನ್ ಟ್ರೈಫಾಸ್ಫೇಟ್ (ಎ ಟಿ ಪಿ) ಅನ್ನು ಕೋಶದಲ್ಲಿ ಶಕ್ತಿಯ ಮೂಲವಾಗಿ ಪತ್ತೆಹಚ್ಚಿದ ಭಾರತೀಯ ಜೀವರಸಾಯನಶಾಸ್ತ್ರಜ್ಞರಾಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಮೆಥೊಟ್ರೆಕ್ಸೇಟ್ ಅನ್ನು ಅಭಿವೃದ್ಧಿಪಡಿಸಿದಲ್ಲದೆ ಔರೋಮೈಸಿನ್ ಮತ್ತು ಟೆಟ್ರಾಸೈಕ್ಲಿನ್ ಸೇರಿದಂತೆ ವ್ಯಾಪಕವಾದ ಪ್ರತಿಜೀವಿಕಗಳನ್ನು ಕಂಡುಹಿಡಿದಿದ್ದಾರೆ. = ವೈಯಕ್ತಿಕ ಜೀವನ = ಯಲ್ಲಾ ಪ್ರಗಡ ಸುಬ್ಬರಾವ್ ಅವರು ಆಂಧ್ರಪ್ರದೇಶಕ್ಕೆ ಸೇರಿದ ಭೀಮಾವರಂನಲ್ಲಿ ಜನವರಿ ೧೨,೧೮೯೫ರಂದು ಜನಿಸಿದರು. = ವೃತ್ತಿ ಜೀವನ = ಯಲ್ಲಾ ಪ್ರಗಡ ಸುಬ್ಬರಾವ್ ಗಣಿತದಲ್ಲಿ ಪ್ರಾರಂಭದಿಂದಲೂ ಆಸಕ್ತಿ ಬೆಳೆಸಿದ್ದರು. ಇವರ ಈ ಒಲವು ದಿನ ಕ್ರಮೇಣ ವೈದ್ಯಶಾಸ್ತ್ರದ ಕಡೆ ತಿರುಗಿತು. ಒಂದು ಬಾರಿ ಅತಿಸಾರ ಕಾಯಿಲೆಯಿಂದ ನರಳುತ್ತಿದ್ದಾಗ, ಲಕ್ಷ್ಮೀಪತಿ ಎಂಬ ವೈದ್ಯರು ಮನೆ ಮದ್ದಿನಿಂದಲೇ ರೋಗ ನಿವಾರಣೆ ಮಾಡಿದರು. ಅದಲ್ಲದೆ ಯಲ್ಲಾ ಪ್ರಗಡ ಸುಬ್ಬರಾವ್ ಅವರ ಇಬ್ಬರು ಸಹೋದರರು ಭೇದಿಯಿಂದ ಮರಣಹೊಂದಿದ್ದರು. ಈ ಪ್ರಸಂಗಗಳು ವೈದ್ಯ ವಿದ್ಯೆಯಲ್ಲಿ ತರಬೇತಿ ಪಡೆಯಲು ಯಲ್ಲಾ ಪ್ರಗಡ ಸುಬ್ಬರಾಯರಲ್ಲಿ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸಿತು. ತಾನೂ ಒಬ್ಬ ವೈದ್ಯನಾಗಿ, ತನ್ಮೂಲಕ ಬಡವರ ಸೇವೆಯನ್ನು ಮಾಡಲು ನಿರ್ಧರಿಸಿದರು. ಸಾಕಷ್ಟು ರೋಗಗಳ, ಸುಲಭ ರೂಪದ ಮದ್ದುಗಳನ್ನು ತಯಾರಿಸಬೇಕೆಂದು ಮನಸ್ಸು ಮಾಡಿದರು. ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಮದ್ರಾಸಿನ ಆಯುರ್ವೇದ ಕಾಲೇಜು ಸೇರಿದರು. ಈ ಅಧ್ಯಯನದಲ್ಲಿ ಸಾಕಷ್ಟು ಲಾಭ ಪಡೆದರು. ಪಾಶ್ಚಾತ್ಯ ದೇಶಗಳಲ್ಲಿಯೂ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ, ಆಯುರ್ವೇದ ಔಷಧಿಗಳಿಗೆ ಉತ್ತೇಜನ ನೀಡುವ ಮನಸ್ಸಾಯಿತು. ಹೇಗೋ ಹಣವನ್ನು ಒದಗಿಸಿಕೊಂಡು ಅಮೇರಿಕಕ್ಕೆ ಬಂದರು. ಅಲ್ಲಿನ ಗಾವರ್ಡ್ ಮೆಡಿಕಲ್ ಸ್ಕೂಲಿನಲ್ಲಿ ಕೆಲಕಾಲ ಸೇವೆ ಸಲ್ಲಿಸತೊಡಗಿದರು. ಅಲ್ಲಿ ಅವರು ಪಾಶ್ಚಾತ್ಯ ಔಷಧಿಗಳ ಬಗ್ಗೆ ವೈಜ್ಞಾನಿಕವಾಗಿ ಸಂಶೋಧಿಸಿದರು. ಅಮೇರಿಕದಲ್ಲಿ ತಮ್ಮ ಖರ್ಚು, ಭಾರತದಲ್ಲಿ ಬಿಟ್ಟು ಬಂದಿರುವ ತಮ್ಮ ಪರಿವಾರ ಪೋಷಣೆಯ ಖರ್ಚು, ತಮಗೆ ಬರುತ್ತಿದ್ದ ಸಂಬಳದ ಹಣದಿಂದ ಸಾಕಾಗುತ್ತಿರಲಿಲ್ಲ. ಇದಕ್ಕಾಗಿ ವಿರಾಮದ ಸಮಯದಲ್ಲಿ ವಾರ್ಡುಗಳನ್ನು ಸ್ವಚ್ಛಗೊಳಿಸುವುದು, ಔಷದೋಪಕರಣಗಳ ಬಗ್ಗೆ ಗಮನ ಕೊಡುವುದು ಮೊದಲಾದ ಕಾರ್ಯಗಳ ಮೂಲಕ ಹೆಚ್ಚಿನ ಹಣ ಸಂಪಾದಿಸಿ, ಎರಡೂ ಖರ್ಚನ್ನೂ ನಿಭಾಯಿಸಿಕೊಳ್ಳುತ್ತಿದ್ದರು. ಅದೃಷ್ಟವೋ ಎಂಬಂತೆ ಅಮೇರಿಕದಲ್ಲಿ ಲೆಡೆರ್ಲೆ ಕಂಪನಿಯವರು ಹೊಸಹೊಸ ಔಷಧಿಗಳ ತಯಾರಿಕೆಯ ಕಾರ್ಯಗಳನ್ನು ಕೈಗೊಂಡರು. ಅವರಿಗೆ ಔಷಧಿಗಳ ತಯಾರಿಕೆಯಲ್ಲಿ ಸಂಶೋಧಕರು ಬೇಕಾಗಿದ್ದರು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಮೊದಲಿದ್ದ ಕೆಲಸಕ್ಕೆ ರಾಜಿನಾಮೆ ನೀಡಿ, ಲೆಡೆರ್ಲೆ ಕಂಪನಿಯಲ್ಲಿ ಔಷಧಿಯ ಸಂಶೋಧಕರಾಗಿ ಸೇರಿಕೊಂಡರು. = ಸಂಶೋಧನೆ = ಇವರ ಮೊದಲ ಸಂಶೋಧನೆ "ವಿಟಮಿನ್ ಫೋಲಿಕ್ ಆಸಿಡ್". ಈ ಔಷಧಿಯು ಅತಿಸಾರ ಹಾಗೂ ರಕ್ತಹೀನತೆಯ ಕಾಯಿಲೆಗಳಿಗೆ ರಾಮಬಾಣ ಎನಿಸಿತು. ಇವರು ಸಂಶೋಧಿಸಿದ ಹೆಟ್ರಾಜನ್ ಎಂಬ ಔಷಧಿಯು "ಫೈಲೇರಿಯಾ" ಕಾಯಿಲೆಯನ್ನು ಗುಣಪಡಿಸಲು ಅತ್ಯುತ್ತಮ ಎನಿಸಿತು. ಜೀವರೋಧಕಗಳ ಸಂಶೋಧನೆಗಾಗಿ ಹಳದಿ ಬಣ್ಣದ ಮಣ್ಣಿನಿಂದ "ಅರಿಯೋಮೈಸಿನ್" ಎಂಬ ಔಷಧಿಯನ್ನು ತಯಾರಿಸಿದರು. ಯಲ್ಲಾ ಪ್ರಗಡ ಸುಬ್ಬರಾವ್ ಅವರು ಸೈರಸ್ ಫಿಸ್ಕಿಯವರೊಡನೆ ಸೇರಿ ಫಾಸ್ಫೊಕ್ರಿಯೇಟಿನ್ ಹಾಗೂ ಅಡೆನೋಸೀನ್ ಟ್ರೈಫಾಸ್ಫೇಟ್ (ಎ ಟಿ ಪಿ) ಗಳು ಮಾನವನ ದೇಹದ ಸ್ನಾಯುಗಳ ಸಂಕುಚನಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವುದೆಂಬುದನ್ನು ಕಂಡುಹಿಡಿದರು. = ನಿಧನ = ಯಲ್ಲಾ ಪ್ರಗಡ ಸುಬ್ಬರಾವ್ ಅವರು ಆಗಸ್ಟ್ ೮,೧೯೪೮ ರಂದು ನಿಧನರಾದರು. = ಉಲ್ಲೇಖ =